ಯುರೋಪ್ ನಲ್ಲಿ ಇತ್ತೀಚೆಗಷ್ಟೇ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ ಮರಳಿದ್ದ 26 ವರ್ಷದ ಯುವಕ 16ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನಿಕ್ಷೇಪ್ ಬಂಗೇರಾ (26) ಮೃತಪಟ್ಟಿದ್ದಾರೆ.
ನಿಕ್ಷೇಪ್ ಬಂಗೇರಾ ತನ್ನ ತಂದೆ-ತಾಯಿ ಜತೆ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ. ವಿದೇಶದಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮುಗಿಸಿ ಇತ್ತೀಚೆಗಷ್ಟೇ ಮರಳಿದ್ದ ನಿಕ್ಷೇಪ್ ಸಾವು ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
ಕೆಲವು ವರ್ಷಗಳಿಂದ ನಿಕ್ಷೇಪ್ ಮನೋವ್ಯಾದಿಯಿಂದ ಬಳಲುತ್ತಿದ್ದ ತಂಡ ಮೃತನ ತಂದೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ
ಸ್ಕೂಟಿ ಕಲಿಯುವ ವೇಳೆ ಬಿದ್ದು ವಾಹನಕ್ಕೆ ಹಾನಿಯಾಗಿದ್ದರಿಂದ ಮನೆಯಲ್ಲಿ ಬೈಯುತ್ತಾರೆ ಎಂಬ ಭಯದಿಂದ ಪಿಯುಸಿ ವಿದ್ಯಾರ್ಥಿ, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಸಾಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ನಡೆದಿದೆ.
ಮಂದಾರ್ತಿಯಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಉದ್ಯೋಗಿ ಮಂಜುನಾಥ ಶೆಟ್ಟಿಗಾರ್ ಅವರ ಪುತ್ರ, ಪ್ರಥಮ ಪಿಯುಸಿ ವಿದ್ಯಾರ್ಥಿ ವಂಶಿತ್ (17) ಆತ್ಮಹತ್ಯೆಗೆ ಶರಣಾದವರು.



