ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ಕುರಿತು ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರತಿಪಕ್ಷಗಳು ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಸ್ಪೀಕರ್ ಮತ್ತು ಪ್ರತಿಪಕ್ಷಗಳ ನಡುವಣ ಜಟಾಪಟಿ ತಾರಕಕ್ಕೇರಿದೆ.
ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಪ್ರತಿಪಕ್ಷ ನಾಯಕ ರಾಹುಲ ಗಾಂಧಿಗೆ ಮಾತನಾಡಲು ಅವಕಾಶ ನೀಡದೇ ಇರುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿರುವ ವಿಪಕ್ಷಗಳು ಮಂಗಳವಾರ ನೋಟಿಸ್ ಜಾರಿ ಮಾಡಿವೆ.
ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 50 ಸದಸ್ಯರ ಸಹಿ ಅಗತ್ಯವಿದೆ. ಕಾಂಗ್ರೆಸ್, ಸಮಾಜವಾದಿ, ಆರ್ ಜೆಡಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ 119 ಸದಸ್ಯರು ನೋಟಿಸ್ ಗೆ ಸಹಿ ಹಾಕಿದ್ದಾರೆ.
ನಿಯಮಗಳ ಪ್ರಕಾರ ನೋಟಿಸ್ ಸಲ್ಲಿಸಿದ 14 ದಿನಗಳ ಬಳಿಕವಷ್ಟೇ ಚರ್ಚೆಗೆ ಬರಲಿದೆ. ನೋಟಿಸ್ ಪುರಸ್ಕೃತವಾದ ಬಳಿಕವಷ್ಟೇ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ಮೂಲಗಳ ಪ್ರಕಾರ ಮಾರ್ಚ್ 9ರಂದು ಅವಿಶ್ವಾಸ ನಿರ್ಣಯ ಮಂಡನೆ ಆಗುವ ಸಾಧ್ಯತೆ ಇದೆ.
ಸಂವಿಧಾನದ 94ಸಿ ವಿಧಿಯಡಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಸತ್ ಸದಸ್ಯರು ಸಹಿ ಮಾಡಿದ್ದು, ಅವಿಶ್ವಾಸ ನಿರ್ಣಯ ಮಂಡನೆಯಿಂದ ತೃಣಮೂಲ ಕಾಂಗ್ರೆಸ್ ಪಕ್ಷ ದೂರ ಉಳಿದಿದೆ.
ಕಾಂಗ್ರೆಸ್ ಸೇರಿದಂತೆ 119 ಸಂಸದರು ಸಹಿ ಹಾಕಿದ್ದು, ಟಿಎಂಸಿ ಸಂಸದರು ನೋಟಿಸ್ ಗೆ ಸಹಿ ಹಾಕದೇ ದೂರ ಉಳಿದಿದ್ದರೂ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಬೆಂಬಲಿಸುವುದಾಗಿ ತಿಳಿಸಿದೆ.



