ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂದು ನಟ ದರ್ಶನ್ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರೆ ಮತ್ತೊಂದೆಡೆ ಇದೇ ಜೈಲಿನಲ್ಲಿರುವ ರೌಡಿಗಳು ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿರುವ ಆಘಾತಕಾರಿ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ಕೇಕ್ ಕಟ್ ಮಾಡಿ ಸೇಬಿನ ಹಾರ ಹಾಕಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಫೋಟೊ ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ದರ್ಶನ್ ಕೇಸ್ ಬಳಿಕ ಜೈಲಿನಲ್ಲಿ ರಾಜಾತಿಥ್ಯಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ಬಯಲಾಗಿದೆ.
ಜೈಲಿನಲ್ಲಿ ಕೈದಿಗಳ ಕಳ್ಳಾಟ ಇನ್ನೂ ನಿಂತಿಲ್ಲ. ವಿಚಾರಣಾಧೀನ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಇಲ್ಲ ಎಂಬಂತಾಗಿದೆ. ನಟೋರಿಯಸ್ ರೌಡಿಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಜೈಲಲ್ಲೇ ಭರ್ಜರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ.
ಆ್ಯಪಲ್ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈತ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟೋರಿಯಸ್ ರೌಡಿಶೀಟರ್. ಮೊಬೈಲ್ನಲ್ಲಿ ಬರ್ತ್ಡೇ ಪಾರ್ಟಿಯ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಜೈಲಿನಿಂದಲೇ ವಿಡಿಯೋ, ಪೋಟೋ ಪೋಸ್ಟ್ ಆಗಿದೆ. ಗುಬ್ಬಚ್ಚಿ ಸೀನನ ಶಿಷ್ಯಂದಿರಿಂದ ಪೋಸ್ಟ್ ಆಗಿದೆ. ಜೈಲಧಿಕಾರಿಗಳು, ಸಿಬ್ಬಂದಿಯಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬುದನ್ನು ವೀಡಿಯೋ ಬಹಿರಂಗಪಡಿಸಿದೆ.



