ಧಾರ್ಮಿಕ ಆಚರಣೆ ಜೊತೆಗೆ ಆಧ್ಯಾತ್ಮಿಕ ಚಿಕಿತ್ಸೆ ನೆಪದಲ್ಲಿ ಭಕ್ತರ ಮೇಲೆ ಹಲ್ಲೆ ಮಾಡುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು ಹಾಗೂ ಮೂತ್ರ ಕುಡಿಸಿ ವಿಕೃತಿ ಮೆರೆಯುತ್ತಿದ್ದ ಸ್ವಯಂ ಘೋಷಿತ ಬಾಬಾದ ಬಂಡವಾಳ ಬಯಲು ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಸುಮಾರು ಎರಡು ವರ್ಷಗಳಿಂದ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವೈಜಾಪುರ ತಹಸೀಲ್ ಶಿಯುರ್ ಗ್ರಾಮದ ದೇವಸ್ಥಾನದಲ್ಲಿದ್ದ ಸ್ವಯಂ ಘೋಷಿತ ಬಾಬಾ ಸಂಜಯ್ ಪಗರೆ ಮುಖವಾಡವನ್ನು ಕಳಚಲಾಗಿದೆ.
ನನಗೆ ಅಲೌಕಿಕ ಶಕ್ತಿಗಳಿವೆ ಎಂದು ಹೇಳಿಕೊಂಡ ಸಂಜಯ್ ಪಗರೆ ಅಘೋರಿ ಆಚರಣೆಗಳ ಮೂಲಕ ದಂಪತಿಗೆ ಮಕ್ಕಳನ್ನು ಸಹಾಯ ಮಾಡುವುದು, ದೆವ್ವ ಬಿಡಿಸುವುದು ಅವಿವಾಹಿತರಿಗೆ ಮದುವೆ ಮಾಡಿಸುವುದು ಮಾಡುತ್ತಾ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ.
ತನ್ನ ಬಳಿ ಬಂದ ಭಕ್ತರನ್ನು ತುಳಿಯುವುದು, ಹಲ್ಲೆ ಮಾಡುವುದು, ಮೂತ್ರ ಕುಡಿಸುವುದು, ಕೋಲಿನಿಂದ ಹೊಡೆಯುವುದು, ತನ್ನ ಬೂಟುಗಳನ್ನು ಬಾಯಿಗೆ ತುರುಕುವುದು, ದೇವಸ್ಥಾನದ ಸುತ್ತ ಓಡಿಸುವುದು, ಔಷಧ ಎಂದು ಯಾವುದೋ ಎಲೆಗಳನ್ನು ತಿನ್ನಿಸುವುದು ಮಾಡುತ್ತಿದ್ದ ಈ ನಕಲಿ ಬಾಬಾ ಪುರುಷರ ರೀತಿಯಲ್ಲೇ ಮಹಿಳೆಯರನ್ನೂ ನಡೆಸಿಕೊಳ್ಳುತ್ತಿದ್ದ.
ಮೂಢನಂಬಿಕೆ ವಿರೋಧಿ ಸಂಘಟನೆಯ ಕಾರ್ಯಕರ್ತರು ಗುಪ್ತ ಕ್ಯಾಮೆರಾಗಳನ್ನು ಬಳಸಿ ಕುಟುಕು ಕಾರ್ಯಾಚರಣೆ ನಡೆಸಿ ಬಾಬಾನ ಅಸಲಿ ಮುಖವಾಡ ಕಳಚಿದ್ದಾರೆ. ಈಗ ಬಾಬಾ ಪೊಲೀಸರ ವಶದಲ್ಲಿದ್ದು, ಈತನ ಕರ್ಮಕಾಂಡಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಾಬಾ ನೆಲದ ಮೇಲೆ ಮಲಗಿರುವ ವ್ಯಕ್ತಿಯ ಮುಖದ ಮೇಲೆ ಹೆಜ್ಜೆ ಹಾಕುತ್ತಿರುವುದು ಒಂದು ವೀಡಿಯೊದಲ್ಲಿ ಕಂಡುಬಂದರೆ, ಮತ್ತೊಂದರಲ್ಲಿ ದಿಗ್ಭ್ರಮೆಗೊಂಡ ಅಥವಾ ಅರೆ ಪ್ರಜ್ಞಾಹೀನನಾಗಿ ಕಾಣುವ ಅದೇ ವ್ಯಕ್ತಿ ಬಾಬಾ ಮುಂದೆ ಕುಳಿತಿದ್ದು ಆತನ ಮೇಲೆ ಹಳದಿ ಪುಡಿಯನ್ನು ಎಸೆದು, ಅವನಿಗೆ ಶೂ ವಾಸನೆ ಬರುವಂತೆ ಮಾಡಿ, ಅವನ ಮುಂದೆ ಡ್ರಮ್ ಬಾರಿಸುತ್ತಾನೆ. ಆ ವ್ಯಕ್ತಿ ನಂತರ ನಿಲ್ಲಲು ಕಷ್ಟಪಡುತ್ತಿದ್ದರೆ ಇತರರು ಆತನನ್ನು ಮೇಲಕ್ಕೆ ಎತ್ತಲು ಸಹಾಯ ಮಾಡುತ್ತಿದ್ದಾರೆ. ಈ ವೇಳೆ ಆ ಯುವಕ ತನ್ನ ಸ್ವಾಧೀನ ಕಳೆದುಕೊಂಡಿರುವುದು ಕಂಡು ಬರುತ್ತದೆ.
ಕಾರ್ಯಕರ್ತರ ದೂರಿನ ನಂತರ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಂಚನೆ, ಹಲ್ಲೆ ಮತ್ತು ಮೂಢನಂಬಿಕೆಯನ್ನು ಉತ್ತೇಜಿಸುವುದಕ್ಕಾಗಿ ಅಧಿಕಾರಿಗಳು ಸಂಜಯ್ ಪಗಾರೆ ವಿರುದ್ಧ ಹಲವಾರು ಕಾನೂನು ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ದುರುಪಯೋಗಗಳನ್ನು ತಡೆಗಟ್ಟಲು ಮಹಾರಾಷ್ಟ್ರ ಮೂಢನಂಬಿಕೆ ವಿರೋಧಿ ಮತ್ತು ಮಾಟಮಂತ್ರ ಕಾಯ್ದೆಯನ್ನು ಬಲವಾಗಿ ಜಾರಿಗೊಳಿಸಬೇಕೆಂದು ಕಾರ್ಯಕರ್ತರು ಕರೆ ನೀಡಿದ್ದಾರೆ.



