ಧರ್ಮಸ್ಥಳದಲ್ಲಿ ಕಳೆದ ಎರಡು ವಾರದಿಂದ ನಡೆಯುತ್ತಿರುವ ಎಸ್ ಐಟ್ ಶೋಧ ಕಾರ್ಯ ಶುಕ್ರವಾರ ಹಲವು ಟ್ವಿಸ್ಟ್ ಗಳನ್ನು ಪಡೆದಿದ್ದು, 13ನೇ ಸ್ಥಳದ ಬದಲು ದೂರುದಾರ ತೋರಿದ 15ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆದಿದೆ.
ಶುಕ್ರವಾರ ಸುಮಾರು 4 ಗಂಟೆಗಳ ಕಾಲ ನೇತ್ರಾವತಿ ನದಿ ಪಕ್ಕದ ಕಲ್ಲೇರಿಯ ದಟ್ಟ ಕಾಡಿನಲ್ಲಿ ದೂರುದಾರ ತೋರಿದ ಹೊಸ ಜಾಗವಾದ 15ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆದಿದ್ದು, ಸುಮಾರು 4 ಅಡಿ ಆಳ ಅಗೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
1ರಿಂದ 12 ಮತ್ತು 11ಎ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದ ಎಸ್ ಐಟಿ ಗೆ 6 ಮತ್ತು 11ಎ ನಲ್ಲಿ ಕಳೇಬರದ ಆವಶೇಷಗಳು ಪತ್ತೆಯಾಗಿದ್ದವು. ಉಳಿದೆಡೆ ಯಾವುದೇ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಎಸ್ ಐಟಿ ಅಧಿಕಾರಿಗಳು ದೂರುದಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಇದುವರೆಗೂ ನಡೆದ ಶೋಧ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ತೋರಿಸಿದ ಜಾಗದಲ್ಲಿ 10ರಿಂದ 15 ಅಡಿ ಆಳ ಅಗೆದು ಶೋಧ ನಡೆಸಬೇಕು ಹಾಗೂ ಜಿಪಿಆರ್ ಬಳಸಬೇಕು ಎಂದು ದೂರುದಾರ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೇ ಹಲವು ವರ್ಷಗಳ ಹಿಂದೆ ಮೃತಪಟ್ಟ ಪದ್ಮಾವತಿ ಕೊಲೆ ಪ್ರಕರಣ ಕೂಡ ಉಲ್ಲೇಖಿಸಲಾಗಿದ್ದು, ನೇತ್ರಾವತಿ ನದಿ ಸಮೀಪದ ದಟ್ಟ ಅಡವಿಯಲ್ಲಿ ಗೋಂಕ್ರನಾಥ್ ಎಂಬಲ್ಲಿ ಹೊಸ ಜಾಗದಲ್ಲಿ ಶವ ಹೂತಿರುವುದಾಗಿ ತೋರಿಸಿದ್ದಾರೆ.
13ನೇ ಸ್ಥಳದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇರುವುದರಿಂದ 15ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆದಿದ್ದು, ಸಂಜೆಯವರೆಗೂ ನಡೆದ ಶೋಧ ಕಾರ್ಯದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.
ನಾಳೆಯಿಂದ ಎಸ್ ಐಟಿ ಅಧಿಕಾರಿಗಳು 1ರಿಂದ 12ನೇ ಸ್ಥಳಗಳಲ್ಲಿ ಮತ್ತೆ ಉತ್ಖನನ ಮಾಡುವವರೇ ಅಥವಾ 13ನೇ ಸ್ಥಳದ ಶೋಧ ಕಾರ್ಯ ಮಾಡಿ ಶೋಧ ಕಾರ್ಯಕ್ಕೆ ತೆರೆ ಎಳೆಯುವರೇ ಎಂಬುದನ್ನು ಕಾದು ನೋಡಬೇಕಾಗಿದೆ.



