ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಮತ್ತು ಶ್ರೀ ಉತ್ತರಾಧಿಮಠದ ನಡುವಿನ ಶತಮಾನಗಳ ಹಿಂದಿನ ಕಾನೂನು ಸಂಘರ್ಷ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಸುಖಾಂತ್ಯಗೊಂಡಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯಮೂರ್ತಿ ಸಂಜಯ್ ಕೌರ್ ನೇತೃತ್ವದಲ್ಲಿ ಗುರುವಾರ ಚೆನ್ನೈನಲ್ಲಿ ಶ್ರೀ ಸುಭುದೇಂದ್ರ ತೀರ್ಥರು ಮತ್ತು ಶ್ರೀ ಸತ್ಯಾತ್ಮ ತೀರ್ಥರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಉಭಯ ಮಠಗಳ ಶ್ರೀಪಾದರ ಜೊತೆ ಮಾತನಾಡಿ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ನವ ವೃಂದಾವನ ಜಾಗದಲ್ಲಿ ರಘುವರ್ಯ ತೀರ್ಥರ ವೃಂದಾವನದ ಪೂಜೆ ವಿವಾದದ ಬಗ್ಗೆ ಮಾತುಕತೆ ನಡೆದು ಉಭಯ ಮಠದ ಶ್ರೀಪಾದರು ಶೇಷವಸ್ತ್ರ ಸಮರ್ಪಿಸಿ ಹಸ್ತಲಾಘವ ಮಾಡಿಕೊಂಡರು.
ಮಂತ್ರಾಲಯದ ರಾಯರ ದರ್ಶನಕ್ಕೆ ಉತ್ತರಾದಿ ಮಠದ ಶ್ರೀಪಾದರಿಗೆ ರಾಯರ ಮಠದ ಶ್ರೀಪಾದರು ಆಹ್ವಾನ ನೀಡಿದರು. ಪ್ರತಿ ಆರಾಧನೆ ಗಂಗಾವತಿ, ಧಾರವಾಡ, ದೆಹಲಿ ನ್ಯಾಯಾಲಯದ ತೀರ್ಪಿನ ಮೇಲೆ ನಡೆಯುತ್ತಿತ್ತು.
ನಂತರ ಮಾತನಾಡಿದ ಶ್ರೀಗಳು, ಉಭಯ ಮಠಗಳ ಅಸಾಂಖ್ಯ ಭಕ್ತರ ಶ್ರೇಯಾಭಿವೃದ್ಧಿ ಶ್ರಮಿಸಿದ್ದೇವೆ. ಸಮಾಜದ ಹಿತಕ್ಕಾಗಿ ಒಳ್ಳೆ ರೀತಿಯಲ್ಲಿ ವಿವಾದಗಳು ಆದಷ್ಟು ಬೇಗ ಪರಿಹಾರವಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಾಗಿದೆ ಎಂದು ಹೇಳಿಕೆ ನೀಡಿದ್ದಾರೆ.



