ನಾಯಕ ರಜತ್ ಪಟಿದಾರ್ ಅರ್ಧಶತಕ ಹಾಗೂ ಇತರರು ನೀಡಿದ ಸಮಯೋಚಿತ ಕಾಣಿಕೆ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆ 202 ರನ್ ಗುರಿ ಒಡ್ಡಿದೆ.
ಗುವಾಹತಿಯಲ್ಲಿ ಶನಿವಾರ ನಡೆದ ಪಂದ್ಯ ಮಳೆಯಿಂದ ತಡವಾಗಿ ಆರಂಭಗೊಂಡರೂ ಪೂರ್ಣ ೨೦ ಓವರ್ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.
ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿಗೆ ಇದು ತವರಿನ ಹೊರಗಿನ ಮೊದಲ ಪಂದ್ಯವಾಗಿದ್ದು, ಆರ್ ಸಿಬಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಎಸೆತದಲ್ಲಿಯೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಸ್ಫೋಟಕ ಆಟವಾಡಿ 3 ಓವರ್ ನಲ್ಲಿ 45 ರನ್ ಪೇರಿಸಿ ಸ್ಫೋಟಕ ಅರಂಭ ನೀಡಿದರು. ಆದರೆ 32 ರನ್ ಗಳಿಸಿದ ವಿರಾಟ್ ಕೊಹ್ಲಿ, 14 ರನ್ ಗಳಿಸಿದ ಪಡಿಕ್ಕಲ್ ಬೇಗನೇ ನಿರ್ಗಮಿಸಿದರು.
ಇದೇ ವೇಳೆ ಜಿತೇಶ್ ಕುಮಾರ್ (5), ಕೃನಾಲ್ ಪಾಂಡ್ಯ (1) ಮತ್ತು ಟಿಮ್ ಡೇವಿಡ್ (13) ಬೇಗನೇ ನಿರ್ಗಮಿಸಿದರು. ಇದರಿಂದ ಆರ್ ಸಿಬಿ 94 ರನ್ ಗೆ 6 ವಿಕೆಟ್ ಕಳೆದುಕೊಂಡು 100 ರನ್ ಗಳಿಸುವುದು ಕೂಡ ಕಷ್ಟವಾಗಿತ್ತು.
ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ನಾಯಕ ರಜತ್ ಪಟಿದಾರ್ 40 ಎಸೆತಗಳಲ್ಲಿ 4 ಬೌಂಡರಿ ಮತ್ತು ೪ ಸಿಕ್ಸರ್ ಒಳಗೊಂಡ 63 ರನ್ ಗಳಿಸಿದರು. ರೊಮಾರಿಯೊ ಶೆಪಾರ್ಡ್ (22), ವೆಂಕಟೇಶ್ ಅಯ್ಯರ್ (29) ಮತ್ತು ಭುವನೇಶ್ವರ್ ಕುಮಾರ್ (9) ಸಿಡಿಲಬ್ಬರದ ಆಟವಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ರವಿ ಬಿಶ್ನೋಯಿ ಮತ್ತು ಬ್ರಿಜೇಶ್ ಶರ್ಮ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.



