ಉದ್ಘಾಟನಾ ಪಂದ್ಯ ಸೇರಿದಂತೆ 5 ಪಂದ್ಯಗಳನ್ನು ಬೆಂಗಳೂರಿನ ತವರು ಮೈದಾನದಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಮ್ಮತಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಈ ಬಾರಿ ಆರ್ ಸಿಬಿ ಪಂದ್ಯ ನಡೆಯುವುದು ದೃಢಪಟ್ಟಿದೆ.
ಭದ್ರತಾ ಲೋಪಗಳನ್ನು ಸರಿಪಡಿಸಿಕೊಂಡ ನಂತರ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ಸಮ್ಮತಿಸಿತ್ತು. ಆದರೆ ಆರ್ ಸಿಬಿ ಹಿಂದೇಟು ಹಾಕಿತ್ತು.
ಕೆಎಸ್ ಸಿಎ ನೂತನ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬೆಂಗಳೂರಿನಲ್ಲಿ ಪಂದ್ಯ ಆಡಲು ಆರ್ ಸಿಬಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ ಸಿಬಿ ತಂಡ ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ಸೇರಿದಂತೆ 5 ಪಂದ್ಯಗಳನ್ನು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದ್ದು, ಉಳಿದೆರಡು ಪಂದ್ಯಗಳನ್ನು ಛತ್ತೀಸ್ ಗಢದಲ್ಲಿ ಆಡಲು ತೀರ್ಮಾನಿಸಿದೆ.
ಕಳೆದ ವರ್ಷ ಆರ್ ಸಿಬಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಸುನೀಗಿದ್ದರು. ಈ ದುರ್ಘಟನೆ ಹಿನ್ನೆಲೆಯಲ್ಲಿ ಆರ್ ಸಿಬಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದು, ನಿಂದನೆಗೆ ಬೇಸತ್ತು ಬೆಂಗಳೂರಿನ ಹೊರಗೆ ಆಡಲು ತೀರ್ಮಾನಿಸಿತ್ತು.



