ಲಕ್ನೋ: ನಾಯಕ ದೇವದತ್ ಪಡಿಕ್ಕಲ್ ಮತ್ತು ಅನುಭವಿ ಕೆಎಲ್ ರಾಹುಲ್ ಸಿಡಿಸಿದ ಶತಕಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಸೆಮಿಫೈನಲ್ ನ ಮೊದಲ ಇನಿಂಗ್ಸ್ ನಲ್ಲಿ ಉತ್ತರಾಖಂಡ್ ವಿರುದ್ಧ ಬೃಹತ್ ಮೊತ್ತದತ್ತ ಸಾಗುವ ಮೂಲಕ ಹಿಡಿತ ಸಾಧಿಸಿದೆ.
ಲಕ್ನೋದಲ್ಲಿ ಭಾನುವಾರ ಆರಂಭಗೊಂಡ ಮೊದಲ ಸೆಮಿಫೈನಲ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಆಹ್ವಾನ ಸ್ವೀಕರಿಸಿದ ಕರ್ನಾಟಕ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 355 ರನ್ ಪೇರಿಸಿದೆ.
ಮಯಾಂಕ್ ಅಗರ್ವಾಲ್ (5) ಅವರನ್ನು ಬೇಗನೇ ಕಳೆದುಕೊಂಡ ನಂತರ ಜೊತೆಯಾದ ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಎರಡನೇ ವಿಕೆಟ್ ಗೆ 278 ರನ್ ಜೊತೆಯಾಟ ನಿಭಾಯಿಸಿದರು. ಇದು ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ದಾಖಲಿಸಿದ 2ನೇ ಅತೀ ದೊಡ್ಡ ಜೊತೆಯಾಟವಾಗಿದೆ.
ಕೆಎಲ್ ರಾಹುಲ್ 211 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 141 ರನ್ ಬಾರಿಸಿ ಔಟಾದರು. ಇದು ರಾಹುಲ್ ಪ್ರಸಕ್ತ ರಣಜಿಯಲ್ಲಿ ಸಿಡಿಸಿದ ಸತತ 2ನೇ ಹಾಗೂ ಒಟ್ಟಾರೆ 25ನೇ ಶತಕವಾಗಿದೆ.
ಕೆಎಲ್ ರಾಹುಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಶತಕ ಸಿಡಿಸಿ ಕರ್ನಾಟಕದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಮತ್ತೊಂದು ಶತಕ ಸಿಡಿಸಿ ಕರ್ನಾಟಕದ ಫೈನಲ್ ಕನಸು ಜೀವಂತವಾಗಿರಿಸಿದ್ದಾರೆ.
ಮತ್ತೊಂದೆಡೆ ನಾಯಕನ ಜವಾಬ್ದಾರಿ ಅರಿತು ಆಡಿದ ದೇವದತ್ ಪಡಿಕ್ಕಲ್ 236 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 148 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. 65 ಎಸೆತಗಳಲ್ಲಿ5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 37 ರನ್ ಗಳಿಸಿರುವ ಕರುಣ್ ನಾಯರ್ ದೇವದತ್ ಪಡಿಕ್ಕಲ್ ಗೆ ಕ್ರೀಸ್ ನಲ್ಲಿ ಉಳಿದುಕೊಂಡಿದ್ದಾರೆ.
ಉತ್ತರಾಖಂಡ್ ಪರ ಆದಿತ್ಯ ರಾವತ್ 2 ವಿಕೆಟ್ ಪಡೆದಿದ್ದು ಬಿಟ್ಟರೆ ಉಳಿದ ಯಾವುದೇ ಬೌಲರ್ ಗಳು ನಿರಾಸೆ ಅನುಭವಿಸಿದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ ಮೊದಲ ಇನಿಂಗ್ಸ್ 90 ಓವರ್ 2 ವಿಕೆಟ್ 355 (ದೇವದತ್ ಪಡಿಕ್ಕಲ್ ಅಜೇಯ 148, ಕೆಎಲ್ ರಾಹುಲ್ 141, ಕರುಣ್ ನಾಯರ್ ಅಜೇಯ 37, ಆದಿತ್ಯ ರಾವತ್ 73/2).



