ಬೆಂಗಳೂರು: ಶಾಸಕರು ಐಪಿಎಲ್ ಟಿಕೆಟ್ ಕೇಳಿರುವುದು ತಪ್ಪು. ಆಸಕ್ತಿ ಇದ್ದರೆ ಕಾಸು ಕೊಟ್ಟು ನೋಡಲಿ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಸಿಬಿ ಕಾಲ್ತುಳಿತ ಪ್ರಕರಣ ಆದಾಗ ಏನೆಲ್ಲಾ ಮಾತನಾಡಿದರು. ಈಗ ಅದೇ ಮುಖಂಡರು ಟಿಕೆಟ್ ಕೇಳುತ್ತಿದ್ದಾರೆ. ಮ್ಯಾಚ್ ನೋಡಬೇಕು ಎಂಬ ಆಸಕ್ತಿ ಇದ್ದರೆ ದುಡ್ಡು ಕೊಟ್ಟು ನೋಡಲಿ. ಶಾಸಕರು ಟಿಕೆಟ್ ಕೇಳುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅದು ರಾಷ್ಟ್ರೀಯ ಕ್ರೀಡೆಯೂ ಅಲ್ಲ. ಅದು ಕಮರ್ಷಿಯಲ್ ಗೇಮ್ ಅಷ್ಟೇ ಎಂದು ತಿಳಿಸಿದರು.
ಸರ್ಕಾರ ಮತ್ತೊಂದು ಕ್ರೀಡಾಂಗಣ ಸಿದ್ಧಪಡಿಸುತ್ತಿದೆ. ಯುವಕರಿಗೆ, ಕ್ರೀಡೆಗೆ ಪ್ರೋತ್ಸಾಹ ಕೊಡಬೇಕು. ಬೆಂಗಳೂರಿನ ನಾಲ್ಕು ಕಡೆ ಸ್ಟೇಡಿಯಂ ಬೇಕು. ನನ್ನ ಕ್ಷೇತ್ರದಲ್ಲಿ ಕ್ರೀಡಾಂಗಣ ಕೇಳಿದ್ದೆ. ಹಿಂದೆ ನಾನು ಜಮೀರ್ಗೆ ಮನವಿ ಮಾಡಿದ್ದೆ. ಸೂರ್ಯನಗರದಲ್ಲಿ ಮಾಡಿ ಅಂತ ಹೇಳಿದ್ದೆವು. ಈಗ ಅಲ್ಲಿ ಕ್ರೀಡಾಂಗಣ ಮಾಡೋಕೆ ಹೊರಟಿದೆ. ಬಿಡದಿಯಲ್ಲೂ ಕ್ರೀಡಾಂಗಣ ಮಾಡಬೇಕು. ಶಿವರಾಮಕಾರಂತ ಬಡಾವಣೆಯಲ್ಲಿ ಜಾಗವಿದೆ. 40 ಎಕರೆ ಜಾಗ ಇದೆ, ಅಲ್ಲಿಯೂ ಮಾಡಲಿ ಎಂದು ಅವರು ಸಲಹೆ ನೀಡಿದರು.
ತ್ರಿಭಾಷಾ ಸೂತ್ರದಿಂದ ಮಕ್ಕಳಿಗೆ ಒತ್ತಡ
ದೇಶದಲ್ಲಿ ಮಾತೃ ಭಾಷೆ ತುಂಬಾ ಮುಖ್ಯ. ದ್ವಿಭಾಷಾ ನೀತಿಯನ್ನು ಮಾಡಬೇಕೆಂದಿದ್ದಾರೆ. ದ್ವಿಭಾಷಾ ನೀತಿಗೆ ನಮ್ಮ ಒತ್ತಾಯವಿದೆ. ತೃತೀಯ ಭಾಷೆ ಬೇಕಾ ಬೇಡ್ವಾ ಪೋಷಕರಿಗೆ ಬಿಟ್ಟಿದ್ದು. ಮಕ್ಕಳಿಗೆ ಮೂರು ಭಾಷೆ ಒತ್ತಡ ಹಾಕಿದ್ರೆ ಕಷ್ಟ. ಅವರ ಕಲಿಕೆ ಮೇಲೆ ಪರಿಣಾಮ ಬೀಳುತ್ತದೆ. ಸಚಿವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಎರಡು ಭಾಷೆ ಕಲಿಯಿರಿ ಅಂತ ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ವಿರೋಧ ಮಾಡೋದೇ ಗುರಿ. ಅವರು ಕೇಂದ್ರ ನಾಯಕರನ್ನು ಮೆಚ್ಚಿಸಬೇಕು. ನಾವು ಹಿಂದಿ ಪರ ಹೋರಾಟ ಮಾಡ್ತಿದ್ದೇವೆ. ಆ ತರಹ ಕೇಂದ್ರದ ನಾಯಕರಿಗೆ ತೋರಿಸಬೇಕು. ಅದನ್ನ ಬಿಜೆಪಿ ನಾಯಕರು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದು ಶೈಕ್ಷಣಿಕ ನಿರ್ಧಾರನಾ ಆಥವಾ ರಾಜಕೀಯನಾ ಎಂಬ ಪ್ರಶ್ನೆಗೆ, ಆವತ್ತಿನ ಪರಿಸ್ಥಿತಿ ಬೇರೆ, ಇವತ್ತಿನ ಪರಿಸ್ಥಿತಿ ಬೇರೆ. ಇವತ್ತು ಎರಡು ಭಾಷೆಗೆ ಅವಕಾಶ ಕೊಟ್ಟಿದ್ದಾರೆ. ಬಹುತೇಕರು 3ನೇ ಭಾಷೆಯಲ್ಲಿ ಫೇಲ್ ಆಗ್ತಾರೆ. ಹಾಗಾಗಿ ಈ ಬೆಳವಣಿಗೆಯನ್ನ ತಂದಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ ಎಂದರು.
ದಾವಣಗೆರೆ ವಿಚಾರದಲ್ಲಿ ಜಮೀರ್ ಮುನಿಸು ವಿಚಾರವಾಗಿ ಮಾತನಾಡಿ, ಅವರು ನಗ್ತಾನೇ ಇದ್ದಾರಲ್ಲ? ಕೇರಳದಲ್ಲಿ ಪ್ರಚಾರ ಮಾಡ್ತಿದ್ದಾರೆ. ಎಲ್ಲೋ ಒಂದು ಕಡೆ ಮಾಡ್ತಿದ್ದಾರಲ್ಲ. ಜನ ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ ಹಾಕ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿಳಂಬ ಆಗ್ತಿದೆ ಅನ್ನೋದು ಗೊತ್ತಿಲ್ಲ. ನಾನು ಆಕಾಂಕ್ಷಿ ಅಂತ ಹೇಳೇ ಇಲ್ಲ. ಆ ರೀತಿ ಎಲ್ಲಿಯೂ ನಾನು ಹೇಳಿಲ್ಲ. ಯಾರು ಡಿ. ಕೆ. ಸುರೇಶ್ ಆಗಬೇಕು ಅಂತಿಲ್ಲ. ನಾನೇನು ಆ ರೀತಿ ನೋಡಿಲ್ಲ ಎಂದು ತಿಳಿಸಿದರು.



