ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ 178ಕ್ಕೂ ಅಧಿಕ ರೆಸಾರ್ಟ್ ಗಳ ಮೇಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ದಾಳಿ ನಂತರ 80ಕ್ಕೂ ಅಧಿಕ ರೆಸಾರ್ಟ್ ಗಳಿಗೆ ಬೀಗ ಜಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಆದೇಶದ ಮೇರೆಗೆ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಅನಧಿಕೃತ ರೆಸಾರ್ಟ್ಗಳ ಮೇಲೆಜೆಸ್ಕಾಂ, ಕಂದಾಯ, ಪಂಚಾಯತ್ ರಾಜ್, ಅಬಕಾರಿ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡಗಳು, ಕೊಪ್ಪಳ ತಾಲೂಕಿನ ಬಸಾಪುರ, ಗಂಗಾವತಿ ತಾಲೂಕಿನ ಆನೆಗೊಂದಿ, ಸಣಾಪುರ ಭಾಗದಲ್ಲಿನ ಅನಧಿಕೃತ ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದಾರೆ.
ದಾಳಿಯ ವೇಳೆ ರೆಸಾರ್ಟ್ ನಡೆಸಲು ಯಾವುದೇ ಅನುಮತಿ ಪಡೆಯದೇ ಇರುವುದು ಪತ್ತೆಯಾಗಿದೆ. ಅಲ್ಲದೇ ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತನೆ ಮಾಡದೇ ಉದ್ಯಮಕ್ಕೆ ಬಳಸಿರುವುದು ದೃಢಪಟ್ಟಿದೆ. ಇಂತಹದ ರೆಸಾರ್ಟ್ ಗಳಿಗೆ ಬೀಗ ಜಡಿಯಲಾಗಿದೆ. ಜೆಸ್ಕಾಂ ಇಲಾಖೆಯ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಿ ಮೀಟರ್ ತೆಗೆದುಹಾಕಿದರೆ, ಪಂಚಾಯಿತಿಯ ವಾಟರ್ಮನ್ಗಳು ನೀರಿನ ಸಂಪರ್ಕ ಕಡಿತ ಮಾಡಿದ್ದಾರೆ.
178 ಅನಧಿಕೃತ ರೆಸಾರ್ಟ್ ಗಳು
ಬಸಾಪುರ ಭಾಗದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಸುಮಾರು 150ಕ್ಕೂ ಹೆಚ್ಚು ರೆಸಾರ್ಟ್ಗಳ ಪೈಕಿ 98ಕ್ಕೂ ಹೆಚ್ಚು ಅನಧಿಕೃತವಾಗಿದ್ದರೆ, ಗಂಗಾವತಿ ತಾಲೂಕಿನ 50ರ ಪೈಕಿ 40 ಅನಧಿಕೃತ ರೆಸಾರ್ಟ್ ಗಳು ಪತ್ತೆಯಾಗಿವೆ. ಆನೆಗೊಂದಿ, ಸಣಾಪುರ, ಮಲ್ಲಾಪುರ, ಸಂಗಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿನ 40 ರೆಸಾರ್ಟ್ಗಳಿಗೆ ಬೀಗ ಹಾಕಲಾಗಿದೆ.
40ರ ಪೈಕಿ ಆನೆಗೊಂದಿಯಲ್ಲಿ ಹತ್ತು, ಹನುಮನಹಳ್ಳಿಯಲ್ಲಿ ಐದು, ಅಂಜನಹಳ್ಳಿಯಲ್ಲಿ ಮೂರು, ಸಂಗಾಪುರದಲ್ಲಿ ಹತ್ತು, ಚಿಕ್ಕರಾಂಪುರ, ಮಲ್ಲಾಪುರಸೇರಿದಂತೆ ಇತರ ಗ್ರಾಮಗಳಲ್ಲಿ 12 ರೆಸಾರ್ಟ್ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಒಟ್ಟಾರೆ ೧೭೮ ರೆಸಾರ್ಟ್ ಗಳ ಪೈಕಿ 80 ರೆಸಾರ್ಟ್ ಗಳಿಗೆ ಬೀಗ ಜಡಿಯಲಾಗಿದೆ ಎಂದು ದಾಳಿಯ ನೇತೃತ್ವ ವಹಿಸಿದ್ದ ತಾಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಗಂಗಾವತಿ ತಾಲೂಕಿನಲ್ಲಿರುವ ಅನಧಿಕೃತ ರೆಸಾರ್ಟ್ಗಳ ಮೇಲೆ ತಹಶೀಲ್ದಾರ್ ವಿಶ್ವನಾಥ ಮುರಡಿ ನೇತೃತ್ವದಲ್ಲಿನ ಸಿಬ್ಬಂದಿ ಸಣಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿ ಆನೆಗೊಂದಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದಾರೆ.



